ವಿವೇಕ್ ಜೊತೆಗೆ ಯೂತ್ ಫೆಸ್ಟಿವಲ್ ನೆನಪಿನ ಮೆಲುಕು...!


ವಿವೇಕ್ ಓಬೇರಾಯ್ ಈಗ ಎಲ್ಲರಿಗೂನೂ ಪರಿಚಯಾ ಆಗಿರೋ ಹೆಸರು. ಜನಪ್ರಿಯ ಬಾಲಿವುಡ್ ನಟ ಅಷ್ಟ ಅಲ್ಲ; ಜನಸೇವಾ ಕಾರ್ಯದಾಗ ತೊಡಗಿಕೊಂಡಿರೋ ಜನಪ್ರಿಯತೆ ಗಳಿಸಿರೋ ಗಣ್ಯವ್ಯಕ್ತಿ. ಅದರ ವಿವೇಕ್ ತಾನು ವರ್ಷಗಳ ಹಿಂದ ಭೇಟಿ ಆಗಿದ್ದ ಗೆಳೆಯಾರನ್ನ ಮರತಿಲ್ಲಾ ಅನ್ನೋದ ವಿಶೇಷ. ದೊಡ್ಡ ಸ್ಟಾರು ನಾನು ಅಂತ ಧಿಮಾಕು ಮಾಡೋದಿಲ್ಲ. ಭಾಳ ಸಂಭಾವಿತ ವ್ಯಕ್ತಿ. ಹನ್ನೆರಡು ವರ್ಷದ ಹಿಂದ ಭೇಟಿಯಾಗಿ ಒಂದು ವಾರ ಜೊತಿಗೆ ಇದ್ದ ಗೆಳೆಯಾರನ್ನ ಅವಾ ಮರತಿಲ್ಲಾ. ಅದು ನನಗ ಗೊತ್ತಾಗಿದ್ದು ಅವನ್ನ ಶ್ರೀಲಂಕಾದಾಗ ಭೇಟಿ ಆದಾಗ.

ನನ್ನ ಮತ್ತ ವಿವೇಕ್ ಭೇಟಿ ಆಗಿದ್ದು ಕಳದ ತಿಂಗಳದಾಗ. ಶ್ರೀಲಂಕಾದ ರಾಜಧಾನಿ ಕೊಲಂಬೊಕ್ಕ ವಿಶ್ವಕಪ್ ಕ್ರಿಕೆಟ್ ವರದಿ ಮಾಡಾಕ ಹೋಗಿದ್ದಾಗ. ಶ್ರೀಲಂಕಾ ಪ್ರೆಸಿಡೆಂಟ್ ಸಾಹೇಬರು ಕ್ರಿಕೆಟ್ ವರದಿ ಮಾಡಾಕ ಬಂದಿದ್ದ ಎಲ್ಲಾ ವಿದೇಶಿ ಪತ್ರಕರ್ತರನ್ನ ತಮ್ಮ ಸರ್ಕಾರಿ ನಿವಾಸಕ್ಕ ರಾತ್ರಿ ಊಟಕ್ಕ ಕರದಿದ್ರು. ನಾನು ಮತ್ತ ನಮ್ಮ ಫೋಟೊಗ್ರಾಫರು ಸ್ಯಾಮ್ಸನ್ ವಿಕ್ಟರ್ ಅಲ್ಲಿಗೆ ಹೋಗಿದ್ವಿ. ಅಲ್ಲಿಗೆ ವಿವೇಕ್ ಮತ್ತ ಅವನ ಹೆಂಡತಿ ಪ್ರಿಯಾಂಕಾ ಅವರೂ ಬಂದಿದ್ರು.

ನಾನು ಮತ್ತ ಸ್ಯಾಮ್ಸನ್ ಮತ್ತ ಒಂದಿಷ್ಟು ದೆಹಲಿ ಜರ್ನಲಿಸ್ಟುಗಳು ಜೊತಿಗೆ ವೈನ್ ಹೀರಾಕ ಹತ್ತಿದ್ವಿ. ಆ ಹೊತ್ತಿಗೆ ವಿವೇಕ್ ಒಳಗ ಬಂದ. ಅಲ್ಲಿದ್ದವ್ರು ಬಾಲಿವುಡ್ ಸ್ಟಾರ್ ಜೊತಿಗೆ ಮುತ್ತಿಗಿ ಹಾಕ್ಕೊಂಡ್ರು. ನಾನು ಸುಮ್ಮನ ಎಲ್ಲಾರೂ ಹೋದಮ್ಯಾಗ ಮಾತಾಡಿಸಿದ್ರ ಆತು ಅಂತ ಸುಮ್ಮನ ನಿಂತಿದ್ದೆ. ಆದರ ವಿವೇಕ್ ಕಡಿಗೆ ಒಮ್ಮೆ ನೋಡಿ ನಕ್ಕೆ. ಅವಾನೂ ನಕ್ಕ. ಸ್ವಲ್ಪ ಹೊತ್ತಾದಮ್ಯಾಗ ಅವನಿಗ ನನ್ನ ನೆನಪು ಆಗಿರಬೇಕು ಅನಸತದ. ಮತ್ತ ಗುಂಪಿನ್ಯಾಗಿಂದ ಮತ್ತೊಮ್ಮೆ ಹಿಂದ ನೋಡಿದ. ನಾನು ನೋಡಿದೆ; ಆಗ ಅವಗ ನನ್ನ ಜೊತೆಗೆ ಕಾಲೇಜ್ ದಿನದಾಗ ಕಳದಿದ್ದ ಒಂದು ವಾರದ ನೆನಪು ಆಗಿರಬೇಕು. ತಕ್ಷಣ ತನ್ನ ಹೆಂಡತೀನ ಕರಕೊಂಡು ನನ್ನ ಕಡೀಗೆ ಬಂದ. ನಾನು ಪ್ರಸಿಡೆಂಟ್ ಪ್ಯಾಲೇಸಿನ್ಯಾಗ ನಡದಿದ್ದ ಡಾನ್ಸ್ ನೋಡಕೊಂತ, ವಿವೇಕ್ ಕಡೆಗೂ ಒಂದು ಗಮನಾ ಇಟ್ಟಿದ್ದೆ.

ಅವಾ ಬಂದವನ ನನ್ನ ಕಡೀಗೆ ನೋಡಿ; ನೀನು ನಮ್ಮ ಕಾಲೇಜಿನ್ಯಾಗ ಯೂತ್ ಫೆಸ್ಟಿವಲ್ ನಡದಾಗ ಡಾನ್ಸ್ ಮಾಡಿದ್ಯಲ್ಲಾ? ಅಂತ ಹಿಂದಿನ್ಯಾಗ ಕೇಳಿದ. ನಾನು ತಕ್ಷಣ ಅಚ್ಚರಿ ಪಟ್ಟೆ; ಅಷ್ಟೊಂದು ಹಳೆ ನೆನಪು ಇವನಗ ಐತಲ್ಲ ಅಂತ ಖುಶಿನೂ ಆತು. ಆಮ್ಯಾಲ ನಾನ ಅವಗ "ಮುಂಬೈ ಮಿಥಿಬಾಯ್ ಕಾಲೇಜ್ ಯೂತ್ ಫೆಸ್ಟಿವಲ್... ಜಾದೂ ತೇರಿ ನಜರ್...!" ಎಂದು ಸಂಕೇತ ಕೊಟ್ಟೆ. ಆಗ ಅವನು ನಕ್ಕ. "ಓಹ್ ಯಾರ್... ಕ್ಯಾ ಮಸ್ತಿ ಕಿಯಾಥಾ..." ಎಂದು ಅಪ್ಪಿಕೊಂಡ.

"ತುಮಾರಾ ಗ್ರೂಪ್ ಕೆ ಸಾಥ್ ಬಹುತ್ ಮಸ್ತಿ ಕಿಯಾಥಾ. ಓ ಕೌನ್ ಥಾ ತುಮಾರಾ ಗ್ರೂಪ್ ಮೆ ತಬಲಾ ಬಜಾಕೆ, ಉಸ್ತಾದ್ ಅಲ್ಲಾ ರಖಾಜಿ ಕೊ ಭಿ ಖುಶ್ ಕಿಯಾಥಾ...?" ಎಂದ ವಿವೇಕ್. ಆಗ ವಿವೇಕ್ ನೆನಪಿನ ಬುತ್ತಿ ಬಿಚ್ಚಿಕೊಂಡಿತು. ನಾನು "ರವಿಕಿರಣ್ ನಾಕೋಡ್..." ಎಂದು ನೆನಪಿಸಿದೆ.

ಹೌದು; ರವಿಕಿರಣ್ ಅವರು ನಮ್ಮ ಕರ್ನಾಟಕ ವಿಶ್ವವಿದ್ಯಾಲಯದ ಸಂಗೀತ ವಿಭಾಗದಾಗ ಇದ್ದವರು. ಅವರು ಮಿಥಿಬಾಯಿ ಕಾಲೇಜಿನ್ಯಾಗ ನಡದಿದ್ದ ಯೂತ್ ಫೆಸ್ಟಿವಲ್ಲಿನ್ಯಾಗ ರವಿಕಿರಣ್ ನಾಕೋಡ್ "ತಬಲಾ" ನುಡುಸೋ ಸ್ಪರ್ಧೆನ್ಯಾಗ ಪಾಲ್ಗೊಂಡಿದ್ರು. ಅವತ್ತ ರವಿಕಿರಣ್ ತಬಲಾ ನುಡಿಸಿದ್ದಾಗ; ಜಡ್ಜ್ ಆಗಿ ಬಿಂದಿದ್ದ ಉಸ್ತಾದ್ ಅಲ್ಲಾ ರಖಾ ಅವರ ಎದ್ದು ಹೋಗಿ ಸ್ಟೇಜಿನ್ಯಾಗಿದ್ದ ರವಿಕಿರಣ್ ಅವರನ್ನ ಅಪ್ಪಿಕೊಂಡಿದ್ರು. ಆ ಘಟನೆನ ವಿವೇಕ್ ಓಬೇರಾಯ್ ನೆನಪಿನ್ಯಾಗ ಇಟ್ಟಕೊಂಡಿದ್ದಾ. ಅಷ್ಟ ಅಲ್ಲ; ನಮ್ಮ ಗುಂಪಿನ್ಯಾಗಿದ್ದ ಸಂಜಯ್ ನೀಲಗುಂದ, ಹಿರೇಮಠ, ಶಿರಸಿ ಅವರು ಊಟಕ್ಕ ಕೂಡಮೊದಲ "ಜಾದೂ ತೇರಿ ನಜರ್..." ಅನ್ನೋ ಸಿನಿಮಾ ಹಾಡನ್ನ ಪ್ರಾರ್ಧನೆ ಥರಾ ಹಾಡತಿದ್ದದ್ದನ್ನ ಕೂಡ ವಿವೇಕ್ ನೆನಪಿಸಿಕೊಂಡಿದ್ದ.

ಯೂತ್ ಫೆಸ್ಟಿವಲ್ಲಿಗೆ ಹೋದಾಗ ಮಿಥಿಬಾಯಿ ಕಾಲೇಜ್ ಟೆರೆಸ್ ಮ್ಯಾಗ ಊಟಕ್ಕ ಕುಂತಾಗ ನಮ್ಮ ಗುಂಪಿನ ಜೊತಿಗೆ ಬಂದು ಹಾಡಿ ಕುಣಿದಿದ್ದ ಇದ ವಿವೇಕ್ ಓಬೇರಾಯ್. ಅಷ್ಟ ಅಲ್ಲ ಆವಾಗನ ತನ್ನ ತೆರದ ಜೀಪಿನ್ಯಾಗ ಅರ್ಧಾ ಮುಂಬೈ ಕೂಡ ಸುತ್ತಿಸಿದ್ದ. ನಮಗ ಆವಾಗ ವಿವೇಕ್, ಸುರೇಶ್ ಓಬೇರಾಯ್ ಮಗಾ ಅನ್ನೋದು ಮಾತ್ರ ಗೊತ್ತಿತ್ತು. ಆದರ ನಾವು ಆವಾಗ ಈ ವಿವೇಕ ದೊಡ್ಡ ಬಾಲಿವುಡ್ ಸ್ಟಾರ್ ಆಗತಾನ ಅಂತ ಖಂಡಿತ ಅಂದುಕೊಂಡಿರಲಿಲ್ಲ. ಆವಾಗ ಅವನೂ ನಮ್ಮ ಹಾಂಗ ಹುಡಗ ಬುದ್ಧಿ ಹುಡಗ ಆಗಿದ್ದ. ಮಿಥಿಬಾಯಿ ಕಾಲೇಜಿನ್ಯಾಗ ಕಲ್ಚರ್ ವಿಭಾಗದ ಸ್ಟೂಡೆಂಟ್ ಸೆಕ್ರೆಟರಿನೂ ಆಗಿದ್ದ. ಅದ ಟಾಯಮಿನ್ಯಾಗ ವಿವೇಕ್ ಜೊತಿಗ ನನ್ನ ಭೇಟಿ ಆಗಿದ್ದು.

ನಾನು ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದಾಗ ಓದೋವಾಗ ಮುಂಬೈಗೆ ಯೂತ್ ಫೆಸ್ಟಿವಲಿನ್ಯಾಗ ಪಾಲ್ಗೊಳ್ಳಾಕ ಹೋಗಿದ್ದು. ಆವಾಗ ವಿವೇಕ್ ಅಲ್ಲಿನ ಮಿಥಿಬಾಯಿ ಕಾಲೇಜಿನ್ಯಾಗ ಕಲ್ಚರ್ ವಿಭಾಗದ ಸ್ಟೂಡೆಂಟ್ ಸೆಕ್ರೆಟರಿ ಆಗಿದ್ದರು. ಆವಾಗ ವಿವೇಕ್ ಈಗಿನಹಾಂಗ ಇರಲಿಲ್ಲ. ಉದ್ದ ಕೂದಲು, ಕಿವಿಯಾಗ ಒಂದು ಓಲೆ, ಲೆದರ್ ಜಾಕೆಟ್, ಜೀನ್ಸ್... ಹಿಂಗ ಇತ್ತು ವಿವೇಕ್ ಸ್ಟೈಲ್. ಕೆಂಪು ಬಣ್ಣದ ಓಪನ್ ಜೀಪು. ಅದರಾಗ ಅವಾ ಬರತಿದ್ದ.

ಆತಿಥೇಯ ಕಾಲೇಜಿನವಾ ಆಗಿದ್ದರಿಂದ ಅವಾ ನಮ್ಮ ಕುಶಲ ತಿಳಿಯಲು ಒಂದು ವಾರ ಪೂತರ್ಿ ಆಗಾಗ ಬಂದು ಮಾತನಾಡಿಸತಿದ್ದಾ. ವಿವೇಕ್ ಮತ್ತ ಅವನ ಫ್ರೆಂಡ್ಸ್ ಎಲ್ಲಾರಿಗೂ ಕರ್ನಾಟಕ ವಿಶ್ವವಿದ್ಯಾಲಯದ ಗುಂಪು ಭಾರಿ ಇಷ್ಟಾ ಆಗಿತ್ತು. ನಾವು ಮಾಡತಿದ್ದ ವಿಶಿಷ್ಟವಾದ ರೀತಿಯ ಗದ್ದಲ ಎಲ್ಲಾರನ್ನೂ ಸೆಳಿತಿತ್ತು. ಊಟದ ಹೊತ್ತಿಗಂತೂ ನಮ್ಮ ಗುಂಪಿನ ಜೊತಿಗೆ ವಿವೇಕ್ ಮತ್ತ ಅವನ ಫ್ರೆಂಡ್ಸು ಬಂದು ನಿಲ್ಲತಿದ್ರು. ನಾವು ಊಟಕ್ಕೂ ಮೊದಲ "ಜಾದೂ ತೇರಿ ನಜರ್..." ಪ್ರಾರ್ಥನೆ ಹಾಡತಿದ್ದರ ಎಲ್ಲಾರೂ ಬಿದ್ದು ಬಿದ್ದು ನಗತಿದ್ದರು.

ನಮ್ಮ ಗುಂಪಿನ್ಯಾಗ ಒಳ್ಳೆ ಹಾಡೋರು ಇದ್ರು. ಅದರಾಗೂ ಶಿರಸಿ ಅನ್ನೋ ನಮ್ಮ ಗೆಳೆಯಾ ಜನಪದ ಧಾಟಿನ್ಯಾಗ ಹಿಂದಿ ಮತ್ತ ಕನ್ನಡ ಹಾಡು ಹಾಡತಿದ್ದ. ಅದನ್ನು ಸಹಿತ ಮೊನ್ನೆ ವಿವೇಕ್ ಭೇಟಿ ಆದಾಗ ನೆನಪು ಮಾಡಿಕೊಂಡಿದ್ದಾತು. ವಿವೇಕ್ ಪತ್ನಿ ಪ್ರಿಯಾಂಕಾ ಕನ್ನಡದವಳು. ಅವಳ ಜೊತಿಗೆ ನಮ್ಮ ಫೋಟೊಗ್ರಾಫರ್ ಕನ್ನಡದಾಗ ಮಾತಾಡತಿದ್ರು. ಅದೆಲ್ಲಾ ಮಾತು ಮುಗದು; ಶ್ರೀಲಂಕಾ ಪ್ರೆಸಿಡೆಂಟು ಬಂದು ಔತಣ ಕೂಟದಾಗ ಒಂದು ಸುತ್ತು ಸುತ್ತಾಡಿ ಹೋದಮ್ಯಾಗ ವಿವೇಕ್ ಮತ್ತ ಮಾತಿಗೆ ಸಿಕ್ಕ.

ಆವಾಗ ಮತ್ತ ಯೂತ್ ಫೆಸ್ಟಿವಲ್ ನೆನಪುಗಳನ್ನ ಮೆಲಕು ಹಾಕಿದ್ದಾತು. ಕೇಳ್ವಾಣಿ ಕಲಾ ಮಂಡಳದ ಕಟ್ಟಿಮ್ಯಾಗ ಕುಂತು ಮಧ್ಯರಾತ್ರಿ ಹೊತ್ತಿನವರಿಗೂ ಹರಟಿ ಹೊಡದಿದ್ದು ಎಲ್ಲಾ ನೆನಪನ್ನ ತಾಜಾ ಮಾಡಿಕೊಂಡ್ವಿ...! ಅದ ಹೊತ್ತಿನ್ಯಾಗ ಶ್ರೀಲಂಕಾ ಪ್ರೆಸಿಟೆಂಟ್ ಸಾಹೇಬ್ರ ಅಧಿಕೃತ ಫೋಟೋಗ್ರಾಫರ್ ಸುದತ್ ಬಂದು ಕ್ಯಾಮರಾ ಕ್ಲಿಕ್ಕಿಸಿದ. ಆಗ ತಗದಿದ್ದ ಕೆಲವು ಚಿತ್ರದಾಗ ಒಂದನ್ನ ಈ ನೆನಪಿನ ಪುಟದಾಗ ಅಂಟಿಸೀನಿ ನೋಡ್ರಿ...!

ಬರಿಯೋದನ್ನ ಮುಗಸೋದಕ್ಕೂ ಮೊದಲ ವಿವೇಕ್ ಬಗ್ಗೆ ಒಂದೆರಡು ಮಾತು ಹೇಳಾಕ ಇಷ್ಟಪಡತೀನಿ. ವಿವೇಕ್ ದೊಡ್ಡ ಸ್ಟಾರ್ ಆದಮ್ಯಾಗು ತಾನು ಭೇಟಿ ಆಗಿದ್ದ ಜನರನ್ನ ನೆನಪು ಇಟ್ಟಕೊಂಡು ಮಾತನಾಡಸ್ತಾನ. ಅದು ಅವನ ದೊಡ್ಡ ಗುಣ. ಇನ್ನೊಂದು ವಿಶೇಷ ಅಂದ್ರ ಶ್ರೀಲಂಕಾದಾಗ ಅವಾ ಮಾಡಿರೋ ಕೆಲಸಾ. ಶ್ರೀಲಂಕಾ ಜನರು ವಿವೇಕ್ ಅಂದ್ರ ಭಾರಿ ಗೌರವಾ ಕೊಡತಾರ. ಅವಾ ಎಲ್ಲಾರ ಜೊತಿಗೂ ನಕ್ಕೊಂಡು ಮಾತಾಡೊ ಒಳ್ಳೆ ಮನಸಿನವಾ. ಕಾಲೇಜ್ ದಿನಗಳ ನೆನಪನ್ನ ಇಟ್ಟುಕೊಂಡು ಅವಾ ಅಂದು ನನ್ನನ್ನ ಮಾತಾಡಿಸಿದ ನಂತರ ಅವನ ಗುಣವನ್ನ ನಾನು ಇನ್ನಷ್ಟು ಮೆಚ್ಚಿಕೊಂಡೀನಿ.