ಸಿಹಿ-ಖಾರ ಇದೇ ಬದುಕಿನ ಸಾರ


ಒಂದು, ಎರಡು, ಮೂರು
ಸಾಕಾಗಲಿಲ್ಲ ಸಿಹಿ.
ನಾಲ್ಕು, ಐದು, ಆರು
ಬೇಕು ಬೇಕು ಇನ್ನಷ್ಟು.
ಸಿಹಿಯಾಗಬೇಕು, ಸವಿಯಿರಬೇಕು.
ಕಷ್ಟಗಳ ಖಾರವೇಕೆ?
ಸಿಹಿ ಇನ್ನಷ್ಟು, ಮತ್ತಷ್ಟು...!
ಏಳು, ಎಂಟು, ಒಂಬತ್ತು
ಸಾಕಾಗಲಿಲ್ಲ ಇವತ್ತು;
ನಾಳೆಗೂ ಬೇಕು;
ಬಾಳೆಲ್ಲ ಸಿಹಿಯಾಗಿರಬೇಕು.
ದೇವರು ವರವನು ಕೊಟ್ಟ;
ಕಷ್ಟಗಳೇ ಬೇಡ ನಿನಗೆ,
ಸಿಹಿಯನ್ನೇ ಸವಿಯುತ್ತಿರು;
ಖಾರ ಎನ್ನುವುದೇ ಬೇಡ...
ತತಾಸ್ಥು ಎಂದ ಭಗವಂತ.
ಒಂದಿಷ್ಟು ದಿವಸ, ಇನ್ನಷ್ಟು ದಿವಸ;
ಕಳೆಯಿತು ವರ್ಷ.
ನಿತ್ಯವೂ ಸಿಹಿಯ ವರ್ಷಧಾರೆ.
ಸಿಹಿ, ಸಿಹಿ, ಸಿಹಿ...!
ಮುಗಿಯಲೇ ಇಲ್ಲ.
ಕಷ್ಟಗಳು ಖಾರವಾಗಿ ಬರಲಿಲ್ಲ.
ಆದರೇನು? ನಿತ್ಯ ಸಿಹಿಯ ಸವಿ!
ಬತ್ತಿ ಹೋಯಿತು ಉತ್ಸಾಹ;
ಸಿಹಿ, ಸಿಹಿ, ಸಿಹಿ...
ಎಷ್ಟಾದರೂ ತಿನ್ನಲು ಸಾಧ್ಯ?
ಸಾಕು; ಬಾಯಿ ಋಚಿಯೇ ಇಲ್ಲ.
ಸಿಹಿ ಎಂದರೆ ವಾಕರಿಕೆ;
ಒಂದಿಷ್ಟು ಖಾರವೂ ಬೇಕು!
ಮತ್ತೆ ದೇವರಿಗೆ ಬೇಡಿಕೆ;
ತಪಸ್ಸು ಮಾಡಿ,
ಭಗವಂತನಿಗೆ ಅರ್ಜಿ.
ಸಾಕು ಸಿಹಿ.
ಕೊಡು ಒಂದಿಷ್ಟು ಖಾರ.
ಅದೇ ನನ್ನ ಬದುಕಿನ ಸಾರ!
ದೇವರು ಪುಡಿಕೆ ಕಟ್ಟಿದ,
ಸಿಹಿಯ ಜೊತೆಗೆ
ಖಾರವನ್ನೂ ತೂಕ ಮಾಡಿ ಕಟ್ಟಿದ!
ತಗೋ ಭಕ್ತ ಎಂದ,
ಬದುಕಿಗೆ ಅರ್ಥವನ್ನೂ ತಂದ.