ಕೊಲಂಬೊದಲ್ಲಿ "ಕ್ಲೆಮೋರ್ ಬಾಂಬ್" ಸಿಡಿದಾಗ ಬಚಾವ್ ಆದ ಬಡಜೀವಿ ನಾನು...!

ಕೊಲಂಬೊದ ಲಿಬರ್ಟಿ ಪಾರ್ಕ್ ಸಮೀಪದ ಕೊಳ್ಳುಪಿಟಿಯಾದಲ್ಲಿ ಬಾಂಬ್ ಬ್ಲಾಸ್ಟ್ ಆದ ಪ್ರದೇಶದ ಮ್ಯಾಪ್ ಇಲ್ಲಿದೆ ಗಮನಿಸಿ. ನಾನು ಇದ್ದ ಆಟೋ ರಿಕ್ಷಾ ಹಾಗೂ ಪಾಕಿಸ್ತಾನದ ರಾಜತಾಂತ್ರಿಕ ಇದ್ದ ಕಾರ್ ನಡುವೆ ಇದ್ದ ಅಂತರ ಸುಮಾರು ನೂರು ಗಜಗಳು ಮಾತ್ರ. ನನ್ನ ನೆನಪಿನ ಆಧಾರದಲ್ಲಿ ಕಲ್ಪನೆ ಮಾಡಿಕೊಂಡು ಗ್ರಾಫಿಕ್ ಸಿದ್ಧಪಡಿಸಿದ್ದೇನೆ. ಅಂದು ನಾನು ಸುಮಾರು ಒಂದು ನಿಮಿಷ ತಡವಾಗಿ ಹೋಟೆಲ್ ನಿಂದ ಪ್ರಯಾಣ ಆರಂಭ ಮಾಡಿದ್ದರೆ ಖಂಡಿತವಾಗಿಯೂ ಬದುಕಿ ಉಳಿಯುತ್ತಿರಲಿಲ್ಲ. ಘಟನೆ ನಡೆದಿದ್ದು 2006 ಆಗಸ್ಟ್ 14ರಂದು (ಸೋಮವಾರ) ಮಧ್ಯಾಹ್ನ 1.15 ಹೊತ್ತಿಗೆ. ಒಂದು ನಿಮಿಷದ ಅಂತರದಲ್ಲಿ ನಾನು ಇದ್ದ ಆಟೋ ರಿಕ್ಷಾ, ಬಾಂಬ್ ಇದ್ದ ಆಟೋ ರಿಕ್ಷಾ ನಿಲ್ಲಿಸಿದ್ದ ಅಡ್ಡರಸ್ತೆಯಿಂದ ಸುಮಾರು ನೂರು ಗಜ ದೂರ ಸಾಗಿತ್ತು. ಆನಂತರ ನನ್ನ ಹಿಂದೆ ದೊಡ್ಡ ಸ್ಫೋಟ ಸಂಭವಿಸಿತ್ತು. ಅದರ ಪ್ರಭಾವ ಎಷ್ಟಿತ್ತೆಂದರೆ ನಾನಿದ್ದ ಆಟೋದ ಹಿಂದಿನ ಹೊದಿಕೆಯಲ್ಲಿ ಕೆಲವು ಕಬ್ಬಿಣದ ತುಣುಕುಗಳು ಹಾಗೂ ಸಿಮೆಂಟ್ ತುಂಡುಗಳು ಬಂದು ಸಿಕ್ಕಿಹಾಕಿಕೊಂಡಿದ್ದವು.

* * * * * * *


ಶ್ರೀಲಂಕಾದ ಕೊಲಂಬೊದಾಗ "ಕ್ಲೆಮೋರ್ ಬಾಂಬ್" ಸಿಡದಾಗ ಬಚಾವ್ ಆಗಿದ್ದ ಬಡಪ್ರಾಣಿ ನಾನು. ಹ್ಯಾಂಗ ಬದುಕಿದೆ, ಅಪಾಯದ ಕತ್ತಿ ಬೀಸಿದಾಗ ತಪ್ಪಿಸಿಕೊಂಡಿದ್ದು ಹ್ಯಾಂಗ ಅನ್ನೋದನ್ನ ಹೇಳೋದಕ್ಕೂ ಮುಂಚೆ "ಕ್ಲೆಮೋರ್ ಬಾಂಬ್" ಬಗ್ಗೆ ಒಂದಿಷ್ಟು ವಿಷಯ್ಯಾ ಹೇಳಿಬಿಡತೀನಿ. ಅವತ್ತ ನಾನು ಕ್ಲೆಮೋರ್ ಬಾಂಬ್ ಸಿಡದಾಗ ಬಚಾವಾಗಿದ್ದು ಖಡ್ಗದ ತುದಿಯಿಂದ ಅಂತನ ಹೇಳಿದ್ದು ಯ್ಯಾಕ ಅಂದರ? ಆ ಬಾಂಬಿಗೆ ಹೆಸರು ಇಟ್ಟದ್ದ ಖಡ್ಗದ್ದು. ಸ್ಕಾಟ್ಲೆಂಡಿನ್ಯಾಗ ಭಾಳ ವರ್ಷದ ಹಿಂದ ಜನಪ್ರಿಯಾ ಆಗಿದ್ದ ಖಡ್ಗ "ಕ್ಲೆಮೋರ್" ಇದು ಚೂಪಾದ ತುದಿ ಇರೋಹಂತಾ ಭಾರಿ ಜಬರ್ದಸ್ಥ್ ಖಡ್ಗಾ ಅದು. ಯಾರನ್ನ ಸಾಯಿಸಬೇಕೋ ಅವರ ಕಡೀಗ ಸೀದಾ ಅದನ್ನ ನುಗ್ಗಸೋದು. ಹಾಂಗ ಮಾಡಿರೋಹಂತಾ ಖಡ್ಗ ಅದು. ಅದಕ್ಕ ಆ ಕ್ಲೆಮೋರ್ ಖಡ್ಗದ ಹೆಸರನ್ನ ಬಾಂಬಿಗೂ ಇಟ್ಟಾರ. ಅದು ಗುರಿ ಇಟ್ಟು ಸಾಯಿಸೋದಕ್ಕ ಅನಕೂಲಾ ಆಗೋಹಂತಾ ಬಾಂಬು.

ಅದ ಬಾಂಬಿನ ಮೊನಚಿಂದಾ ನಾನು ಅವತ್ತ ಶ್ರೀಲಂಕಾದ ಕೊಲಂಬೊದಾಗ ಸ್ವಲ್ಪದರಾಗ ಪಾರು ಆಗಿದ್ದೆ. ಆ ಘಟನಾ ನಡದಿದ್ದು 2006ರ ಆಗಸ್ಟ್ 14 ರಂದು. ಅವತ್ತ ಸೋಮವಾರ ಮಧ್ಯಾಹ್ನ 1.15ರ ಹೊತ್ತಿಗೆ ಆ ಘಟನಾ ನಡದಿತ್ತು. ಪಾಕಿಸ್ತಾನದ ರಾಜತಾಂತ್ರಿಕ ಬಶೀರ್ ವಾಲಿ ಮೊಹಮ್ಮದ್ ಅವರನ್ನಾ ಟಾರ್ಗೆಟ್ ಮಾಡಿಕೊಂಡು ಆ ಬಾಂ
ಬನ್ನ ತಮಿಳು ಟೈಗರ್ ಉಗ್ರರು ಸಿಡಿಸಿದ್ರು. ಆದರ ಅದರಾಗ ಬಶೀರ್ ವಾಲಿ ಅವರಂತೂ ಬಚಾವ್ ಆದ್ರು. ಸತ್ತಿದ್ದು ಏಳು ಮಂದಿ ಬ್ಯಾರೆಯವರು. ಅವತ್ತ ನಂದೂ ತಿಥಿ ಆಗೋದಿತ್ತು. ಅದೇನೋ ಅರವತ್ತು ಕ್ಷಣದಾಗ ಬಚಾವ್ ಆದೆ.

ನಾನು ಕೊಲಂಬೊಕ್ಕ ಹೋ
ಗಿದ್ದು ಶ್ರೀಲಂಕಾ, ಭಾರತ ಮತ್ತ ದಕ್ಷಿಣ ಆಫ್ರಿಕಾ ಆಡಬೇಕಾಗಿದ್ದ ಮೂರು ದೇಶಗಳ ಕ್ರಿಕೆಟ್ ಪಂದ್ಯಾಟಾ ವರದಿ ಮಾಡಾಕ. ಅಲ್ಲಿಗೆ ಹೋಗಿದಾಗಿನಿಂದ ಅತ್ತಾಗ ಜಾಫ್ನಾ ಸಮೀಪದಾಗ ಶ್ರೀಲಂಕಾ ಸೈನಿಕರು ಮತ್ತ ತಮಿಳು ಟೈಗರ್ ಉಗ್ರರ ನಡುವ ಭಾರಿ ಘಮಾಸಾನ್ ಯುದ್ಧಾ ನಡದಿತ್ತು. ಇತ್ತಾಗ ಶ್ರೀಲಂಕಾ ರಾಜಧಾನಿ ಕೊಲಂಬೊದಾಗ ಕೂಡ ಯುದ್ಧದ ಪ್ರಭಾವಾ ಕಾಣಸತಿತ್ತು. ಎಲ್ಲಾ ಕಡೀಗೂ ಭಯದ ವಾತಾವರಣಾ ಇತ್ತು. ಯಾವಾಗಾದ್ರೂ ಏನಾದ್ರೂ ಆದೀತು ಅನ್ನೋ ಭಯಾ ಜನರ ಕಣ್ಣಿನ್ಯಾಗ ತೇಲಾಡತಿತ್ತು. ಎಲ್ಲಿ ನೋಡಿದ್ರೂ ಸೈನಿಕರ ವಾಹನಾ ಓಡಾಡಿಕೊಂಡಿದ್ವು.

ಕೊಲಂಬೊಕ್ಕ ನಾನು ಕ್ರಿಕೆಟ್ ಪಂದ್ಯಾಟ ಶುರುವಾಗೊ ಎರಡು ದಿನಾ ಮೊದಲ ಹೋಗಿದ್ದೆ. ಅವತ್ತ ಆಗಲೇ ರಾತ್ರಿ ಆಗಿತ್ತು. ನಮ್ಮ ಪೇಪರಿನ ಇಂಗ್ಲೀಷ್ ಸಹೋದರ ಪೇಪರ್ ಆಗಿರೊ ಡೆಕ್ಕನ್ ಹೆರಾಲ್ಡಿನ ಹಿರಿಯ ಕ್ರಿಕೆಟ್ ವರದಿಗಾರ
ಕೌಶಿಕ್ ಆಗಲೇ ಒಂದು ದಿನಾ ಮುಂಚೆ ಅಲ್ಲಿಗೆ ಹೋಗಿ ಆಗಿತ್ತು. ನಮ್ಮ ಫೋಟೊ ಗ್ರಾಫರು ಅನಂತ ಸುಭ್ರಮಣ್ಯ ಅವರೂ ಅಲ್ಲಿಗೆ ಹೋಗಿದ್ರು. ನಾವು ಕೊಲಂಬೋದಾಗ ಉಳಕೊಂಡಿದ್ದು "ಸಿನಿಮನ್ ಗ್ರ್ಯಾಂಡ್" ಅನ್ನೋ ಹೋಟೆಲಿನ್ಯಾಗ. ಅದ ಹೊಟೇಲಿನ್ಯಾಗ ದಕ್ಷಿಣ ಆಫ್ರಿಕಾದ ಕ್ರಿಕೆಟ್ ಆಟಗಾರರೂ ಇದ್ರು.

ಮೂರು ದೇಶಗಳ ಕ್ರಿಕೆಟ್ ಪಂದ್ಯಾಟ ಶುರುವಾಗೊದಕ್ಕೂ ಎರಡು ದಿನಾ ಮೊದಲ ಕ್ರಿಕೆಟ್ ಕ್ರೀಡಾಂಗಣಕ್ಕ ನಾನು, ಕೌಶಿಕ್, ಜಿ.ಕೃಷ್ಣನ್ (ಜಿಕ್ಕು), ಅನಂತ ಸುಭ್ರಮಣ್ಯ ಮತ್ತ ಒಂದೆರಡು ಬಂಗಾಲಿ ಪೇಪರ್ ವರದಿಗಾರರು ಒಟ್ಟಿಗೆ ಹೊರಡತಿದ್ವಿ. ಒಟ್ಟಿಗೇ ಮೂರು ಆಟೋ ಹಿಡಕೊಂಡು ಒಂದರ ಹಿಂದ ಒಂದರ ಹಾಂಗ ಹೋಗತಿದ್ವಿ. ಎರಡು ದಿನಾ ಹಾಂಗ ಮಾಡಿದ್ವಿ. ಆದರ ಕೊಲಂಬೊದಾಗ ಕ್ರಿಕೆಟ್ ಸರಣಿ ಆಡೋದಕ್ಕ ಅಷ್ಟೊತ್ತಿಗೆ ಆಗಲೇ ದಕ್ಷಿಣ ಆಫ್ರಿಕಾದೋರು ರೊಳ್ಳಿ ತಗದಿದ್ರು.

ಅವತ್ತ ಅಂದ್ರ ಬಾಂಬ್ ಸ್ಪೋಟ ಆದ ದಿನಾ, ಕೌಶಿಕ್ ಏನೋ ಕಾರಣಕ್ಕ ನಾನು ಆಮ್ಯಾಲ ಬರತೀನಿ ನೀನು ಹೋಗಿರು ಅಂದಾ. ನಮ್ಮ ಫೋಟೊಗ್ರಾಫರು ಅನಂತ ಸುಭ್ರಮಣ್ಯ ಮುಂಜಾನ್ಯಾಗ ಕ್ಯಾಮರಾ ಹೆಗಲಿಗೆ ಹಾಕ್ಕೊಂಡು ಹೊಂಟು ಹೋಗಿದ್ದಾ. ಅದಕ್ಕ ನಾನು ಮತ್ತ ಒಬ್ಬ ಬಂಗಾಲಿ ಪೇಪರ್ ವರದಿಗಾರ ಜೊತಿಗೆ ಕ್ರಿಕೆಟ್ ಸ್ಟೇಡಿಯಮ್ ಕಡೀಗೆ ಹೊಂಟಿವಿ. ನಮ್ಮ ಆಟೋ ರಿಕ್ಷಾ ದಿನಾ ಹೋಗತಿದ್ದದ್ದು ಗಾಲ್ ರೋಡು ಹಿಡಕೊಂಡು ಲಿಬಟರ್ಿ ಪ್ಲಾಜಾ ಮುಂದಿನ ಸರ್ಕಲಿನ್ಯಾಗ ಸುತ್ತಿಕೊಂಡು, ಕೊಳ್ಳುಪಿಟಿಯಾ ಏರಿಯಾದಾಗ ದೊಡ್ಡ ರಸ್ತೆ ಹಿಡಕೊಂಡು. ಅವತ್ತು ಹಾಂಗ ಹೊಂಟಿತ್ತು ನಮ್ಮ ಆಟೋ ರಿಕ್ಷಾ. ಆದ್ರ ಅವತ್ತ ಮೂರು ಆಟೋ ಸಾಲಾಗಿ ಹೊಂಟಿರಲಿಲ್ಲಾ. ಕೌಶಿಕ್ ಮತ್ತ ಕೃಷ್ಣನ್ ಮತ್ತ ಅನಂತ ಸುಭ್ರಮಣ್ಯ ಇರಲಿಲ್ಲಾ ಅದಕ್ಕ ಒಂದ ಆಟೋ ರಿಕ್ಷಾದಾಗ ಇಬ್ಬರು ಹೊಂಟಿದ್ವಿ. ನಮ್ಮ ಹಿಂದ ಇನ್ನೊಂದು ಆಟೋನ್ಯಾಗ ಬಂದೂಕು ಹಿಡಕೊಂಡಿದ್ದ ಶ್ರೀಲಂಕಾ ಆರ್ಮಿನವರೂ ಅದ ರೋಡಿನ್ಯಾಗ ನಮ್ಮ ಹಿಂದನ ಬರಾಕ ಹತ್ತಿದ್ರು. ಆದ್ರ ಅವರದ್ದು ದೊಡ್ಡ ಆಟೋ. ನಮ್ಮ ಗುಲ್ಬುರ್ಗಾ ಕಡೀಗ ಇರತಾವಲ್ಲಾ "ಟಾಂ ಟಾಂ ಆಟೋ" ಅಂಥಾ ಆಟೋನ್ಯಾಗ ಅವರು ಬರಾಕ ಹತ್ತಿದ್ರು. ಆದ್ರ ಸ್ವಲ್ಪ ದೂರ ಹ್ವಾದ ಮ್ಯಾಗ ಆ ಆಟೋ ನಮಗಿಂತಾ ಮುಂದ ಹೋತು.

ನಮ್ಮ ಆಟೋ ಒಂದು ರಸ್ತೇನ್ಯಾಗ ಟರ್...ಟರ್... ಸದ್ದು ಮಾಡಕೊಂಡು ಹೊಂಟಾಗ; ಅದರ ಹತ್ತರದಾಗ ಇನ್ನೊಂದ ಕಡಿಗ ಒಂದು ಜೀಪು, ಅದರ ಹಿಂದ ಎರಡು ಮೂರು ಒಂದ ಥರದ ಕಾರು ಅದರ ಹಿಂದ ಮತ್ತೊಂದು ಜೀಪು, ಅದರ ಹಿಂದ ಮತ್ತ ಎರಡು ಕಾರು... ಹಿಂಗ ಸಾಲಾಗಿ ಹೊಂಟಿದ್ವು. ಆಗ ನಮ್ಮ ಮುಂದಿಂದಾ ಜೀಪು ಮತ್ತ ಎರಡು ಕಾರು ಪಾಸ್ ಆದವು. ಇನ್ನೊಂದು ಜೀಪು ಅದರ ಹಿಂದ ಹೋಗಿ, ಒಂದು ಅಧರ್ಾ ನಿಮಿಷ ಆಗಿತ್ತು. ಅಷ್ಟರಾಗ ಕಿವಿ ಪಟಲಾ ಕಿತ್ತು ಬರೋಹಾಂಗ ಸದ್ದು ಆತು. ಇನ್ನೊಂದು ಕ್ಷಣದಾಗ ಜನಾ ಓಡಾಕ ಹತ್ತಿದ್ರು. ನಾವು ಆಟೋ ಇಳದು ಓಡಿದ್ವಿ. ಹಿಂದ ನೋಡತೀವಿ ದೊಡ್ಡ ಬೆಂಕಿ, ಅದರ ಜೊತೀಗ ಕಪ್ಪಗ ಹೊಗಿ ಬರಾಕ ಹತ್ತಿತ್ತು. ಆಮ್ಯಾಗ ಅಲ್ಲಿದ್ದ ಪೊಲೀಸ್ರು, ಜನಾ, ಅಂಗಡಿಯವ್ರು ಬಾಂಬು ಅಂತ ಹೇಳಿದ್ರು. ಅಷ್ಟ ಅಲ್ಲಾ ನೀವು ಸ್ವಲ್ಪದ್ರಾಗ ಉಳಕೊಂಡ್ರಿ ಅಂತನೂ ಹೇಳಿ; ಜೀವ ಉಳದಿದ್ದಕ್ಕ ಅಭಿನಂದನಾನೂ ಮಾಡಿದ್ರು. ನಮ್ಮ ಆಟೋದಾವಾ ಅಂತೂ ಜಿಂವ ಉಳಿತಲ್ಲಾ ಅನ್ನೊ ಭಾರಿ ಸಂತೋಷದಾಗ ರೊಕ್ಕಾ ಸೈತ ತಗೋಲಿಲ್ಲಾ. ನಾವು ಜರ್ನಲಿಸ್ಟು ಹತ್ತರದಾಗ ಹೋಗಿ ನೋಡಕೊಂಡ ಬರತೀವಿ ಅಂತ ಹೇಳಿ ಆ ಆಟೋದವನ್ನ ಕಳಿಸಿದ್ವಿ.

ಬಂಗಾಲಿ ಪೇಪರಿನ ವರ
ದಿಗಾರಾ ಮತ್ತ ನಾನು ಹತ್ತಿರದಾಗ ಹೋಗಿ ನೋಡಿದಾಗಿನ ದೃಶ್ಯಾ ಇನ್ನೋ ನನ್ನ ಕಣ್ಣಮುಂದ ಕಟ್ಯದ. ಎಲ್ಲಾಕಡಿಗ ಹೆಣಾ, ರಕ್ತಾ...! ನೋಡಾಕ ಆಗದ ಹಾಂಗ ಇತ್ತು. ಆದ್ರ ಎಲ್ಲಾ ಪೊಲೀಸು ಮತ್ತ ಆರ್ಮಿನೋರು ಪಾಕಿಸ್ತಾನದ ರಾಜತಾಂತ್ರಿಕಾ ಉಳದಲ್ಲಾ ಅಂತಾ ಅವನ್ನ ಇನ್ನೊಂದು ಕಾರಿನ್ಯಾಗ ಕುಂಡ್ರಿಸಿಕೊಂಡು ಹೊಂಟಿದ್ರು. ಬ್ಯಾರೆ ಪೊಲೀಸ್ರು ಹೆಣಾದ ಪರಿಚಯಾ ಏನಾದ್ರು ಸಿಗತದೇನೋ ಅಂತ ಹುಡಿಕಿ ಅಷ್ಟೊತ್ತಿಗ್ಯಾಗಲೇ ಸಾಗ ಹಾಕಾಕ ಹತ್ತಿದ್ರು. ಅದ ಹೊತ್ತಿಗೆ ಅಲ್ಲಿಗೆ ಭಾರತದಿಂದ ಕ್ರಿಕೆಟ್ ವರದಿ ಮಾಡಾಕ ಬಂದಿದ್ದ ಟೆಲಿವಿಜನ್ ಚಾನಲ್ ತಂಡಾನೂ ಬಂತು. ಎಲ್ಲಾನೂ ಕಿರಿಚಿಕೊಂಡು ವರದಿ ಮಾಡಾಕ ಹತ್ತಿದ್ರು ಟಿವಿ ನ್ಯೂಸ್ ಜನಾ.

ಅದ ಹೊತ್ತಿಗ ನನ್ನ ಮೊಬೈಲ್ ರಿಂಗ್ ಆತು. ಇನ್ನೊಂದ ಕಡಿಯಿಂದ ಕೌಶಿಕ್ ಫೋನ್ ಮಾಡಿದ್ದ. ಬಾಂಬ್ ಸ್ಪೋಟ ಆತು; ಸಣಿ ಕ್ಯಾನ್ಸಲ್ ಆಗತದ ಅಂತ. ನೀನು ಸೇಫ್ ಆಗಿ ಸ್ಟೇಡಿಯಂ ತಲುಪಿದಿಯ್ಯಾ ಅಂತ ಕೌಶಿಕ್ ಕೇಳಿದಾ. ನಾನು ಹೇಳಿದೆ ನನ್ನ ಹಿಂದನ ಬಾಂಬ್ ಸ್ಪೋಟ ಆತು. ಕಣ್ಣಾರೆ ಪರಿಸ್ಥಿತಿ ನೋಡಾಕ ಹತ್ತೀನಿ ಅಂತ ಹೇಳಿದೆ. ಸಂಜಿ ಹೊತ್ತಿಗೆ ಎಲ್ಲಾ ಘಟನೆ ಸೇರಿಸಿ ನಮ್ಮ ಪೇಪರಿಗೆ ವರದಿ ಕಳಿಸಿ ಹೋಟೆಲ್ಲಿಗೆ ಬಂದೆ. ಆವಾಗ ಕೃಷ್ಣನ್ ಅಂದರ ನಮ್ಮ ಎಲ್ಲಾರ ಪ್ರೀತಿಯ "ಜಿಕ್ಕು" ಕೇಳಿದಾ "ನಾಳೆ ಪೇಜ್ ಒನ್ ಸ್ಟೋರಿನಾ ನಿಂದು?" ಅಂತಾ. ನಾನು ಸುಮ್ಮನ ನಕ್ಕೆ!